My Blog List

Friday 26 September 2014

ಜನಮನದ ಜಾನಪದ

ಬೆಳ್ಳಂಬೆಳಿಗ್ಗೆ ಡಯಟ್ ನಲ್ಲಿ ದೇಸಿ ರಂಗು. ಎಲ್ಲ ನಮ್ಮವರೇ. ನಮ್ಮ ನೆರೆಹೊರೆಯ ಜನರೇ ಎಂಬ ಭಾವ. ಇದು ಜಾನಪದ ನೃತ್ಯ ಸ್ಪರ್ಧೆಯ ಝಲಕ್. ಹೀಗಾಗಿಯೇ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಳ್ಳಿಸೊಗಡಿಗೆ ತಲೆದೂಗಿತ್ತು.
 


ಮಾನ್ಯ ಜಂಟಿ ನಿರ್ದೇಶಕರಾದ ಶ್ರೀ ಚಾಮೇಗೌಡರು, ಜಾನಪದ ವಿದ್ವಾಂಸ, ರಂಗಕರ್ಮಿ ಡಾ.ಪಿ.ಕೆ.ರಾಜಶೇಖರ್ರವರು ವಿನೂತನವಾಗಿ ಚಾಲನೆ ನೀಡಿದರು.




ಅಂದಹಾಗೆ ಲಯಬದ್ಧವಾದ ಸಂಗೀತಕ್ಕೆ ದೇಹ ಚಲಿಸುವ ಈ ನೃತ್ಯಕಲೆ ಅವಿನಾಶಿ. ಅವಿಚ್ಛಿನ್ನ. ಈ ನೆಲದ ಮುಖಗಳನ್ನು ಅನಾವರಣಗೊಳಿಸುತ್ತಲೇ, ಬದುಕಿನ ಹಲವು ಆಯಾಮಗಳಿಗೆ ವಿಸ್ತರಿಸಿಕೊಳ್ಳುತ್ತಾ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಿಗೆ ತನ್ನ ಹರವು ಚಾಚಿಕೊಂಡಿದೆ. ಇಂತಹ ಜಾನಪದ ನೃತ್ಯಕ್ಕೆ ವಸಂತಮಹಲ್ ನಲ್ಲಿ ವೇದಿಕೆ ದೊರೆತದ್ದು ಸಾಂಸ್ಕೃತಿಕ ನಗರಿಯ ಸಂಕೇತದಂತಿರುವ ಮಹಲ್ ಗೆ ಮೆರಗು ನೀಡಿತು.



ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು ಹೀಗೆ ಹಲವು ಕಡೆಯಿಂದ ಬಂದ ಮಕ್ಕಳೆಲ್ಲಾ ರಾಜ್ಯಮಟ್ಟದ ಜಾನಪದ ನೃತ್ಯದಲ್ಲಿ ತಲ್ಲೀನರಾದರು. 


ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ, ಡಿ.ಎಸ್.ಇ.ಆರ್.ಟಿ ಮತ್ತು ಡಯಟ್, ಮೈಸೂರು ಇವರ ಆಶ್ರಯದಲ್ಲಿ ರಾಜ್ಯಮಟ್ಟದ ಜಾನಪದ ನೃತ್ಯ ಸ್ಪರ್ಧೆ ಜರುಗಿತು.





ಸ್ಪರ್ಧೆಗಾಗಿ ಸ್ಪರ್ಧೆ ಮಾಡದೇ ಮಕ್ಕಳು ಹಾಡಿ ಕುಣಿದರು. ನೃತ್ಯಿಸಿ ನಲಿದರು.
- Prashanth M C

Lecturer, Diet, Mysore

Thursday 25 September 2014

ಶಾಲಾ ಭೇಟಿಯ ನೋಟಗಳು


 ನಮ್ಮ ಶಾಲೆಗಳಿವು ನಮ್ಮವು 
 ನಲಿವ ಮಕ್ಕಳ ತಾಣವು
 ಮುದ್ದು ಮಕ್ಕಳ ಕೇಂದ್ರವು 

 ನಾವು ಕಲಿತೆವು 


 
ಮುಳ್ಳೂರ ಪ್ರೌಢಶಾಲೆಯ ಮಕ್ಕಳ ವ್ಯಾಯಾಮ  


 ಚಲ್ಲಹಳ್ಳಿ ಸಂಪನ್ಮೂಲ ಕೇಂದ್ರ 


 ಶಿಸ್ತಿನಿಂದ ಶೌಚಾಲಯದೆಡೆಗೆ ಸಾಗಿದ ರತ್ನಪುರಿ ಕಾಲೋನಿಯ ಮಕ್ಕಳು 


ಮೋದಿಯ ಭಾಷಣ ಆಲಿಸಿದ ಕಲ್ಕುನಿಕೆ ಮಕ್ಕಳು   


  ನಾನು ಓದಬಲ್ಲೆ 

 ಮಂಜುಳ,
ಹಿರಿಯ ಉಪನ್ಯಾಸಕಿ 

ಥರೋ ತರಬೇತಿ

ದಿನಾಂಕ:19-09-2014 ರಿಂದ 23-09-2014 ರವರೆಗೆ ಡಯಟ್ ನಲ್ಲಿ ಎರಡು ತರಬೇತಿಗಳು ಜರುಗಿದವು. 6-7-8 ನೇ ತರಗತಿಗೆ ವಿಜ್ಞಾನ  ವಿಷಯಾಧರಿತ ತರಬೇತಿ ನೀಡಲಾಯಿತು. ಹಾಗೆಯೇ, 4-5ನೇ ತರಗತಿಯ ಕನ್ನಡ , ಇಂಗ್ಲೀಷ್, ಪರಿಸರ ಅಧ್ಯಯನ, ಮತ್ತು ಗಣಿತ ವಿಷಯಾಧರಿತವಾಗಿ ತರಬೇತಿ ನೀಡಲಾಯಿತು. ತರಬೇತಿಯನ್ನುಉಪಪ್ರಾಂಶುಪಾಲರಾದ ಶ್ರೀ ನಾರಾಯಣಗೌಡರು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ 6-8ನೇ ತರ ಗತಿ ವಿಷಯಾಧಾರಿತವಾದ ತರಬೇತಿಯ ಸಂಯೋಜಕರಾದ ಶ್ರೀ ಎಸ್.ಸ್ವಾಮಿರವರು ಎಲ್ಲರನ್ನು ಸ್ವಾಗತಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಉಪಪ್ರಾಂಶುಪಾಲರು ಎಲ್ಲರಲ್ಲೂ ಉತ್ಸಾಹ ತುಂಬಿದರು.

ಇದಕ್ಕೂ ಮೊದಲು ಐಸ್ ಬ್ರೇಕ್ ಅವಧಿಯಲ್ಲಿ ಎಲ್ಲರನ್ನು ಸಾಮೂಹಿಕವಾಗಿ ಸರಳ ವ್ಯಾಯಾಮ, ಚಟುವಟಿಕೆಯಲ್ಲಿ ತೊಡಗಿಸಲಾಯಿತು.


ತರಬೇತಿಯ ಮೊದಲ ಅಧಿವೇಶನದಲ್ಲಿ ಹಿರಿಯ ಉಪನ್ಯಾಸಕರಾದ ಶ್ರೀ ಸ್ವಾಮಿ ರವರು ಎಲ್ಲರಿಗೂ ಯೋಗದ ಯೋಗ ಮುಂದಿಟ್ಟರು. ಪ್ರಾಣಾಯಾಮ, ಸರಳ ಆಸನ, ಯೋಗ ಮುದ್ರೆಗಳನ್ನು ಪರಿಚಯಿಸಿದರು.

ತರಬೇತಿಗಳು ಶಿಬಿರಾರ್ಥಿಗಳ ಪೂರ್ಣಮನದ ಭಾಗವಹಿಸುವಿಕೆಯಿಂದ ಕಳೆಗಟ್ಟಿತ್ತು.


ತರಬೇತಿಯ ಮೂರನೇ ದಿನ ಡಿ.ಎಸ್.ಇ.ಆರ್.ಟಿಯ ಉಪನಿರ್ದೇಶಕ ರಾದ ಶ್ರೀಮತಿ ಭಾರತಿ, ಶ್ರೀಮತಿ ದ್ರಾಕ್ಷಾಯಿಣಿ ರವರು ಆಗಮಿಸಿ, ತರಬೇತಿಯನ್ನು ಹುರಿದುಂಬಿಸಿದರು.


ಕಡೆ ದಿನ  .ಸಿ.ಆರ್.ಪಿ, ಬಿ.ಆರ್.ಪಿ, ಇ.ಸಿ.ಓಗಳ ಅಭಿಪ್ರಾಯ ಸಂಗ್ರಹಣೆ ಮಾಡಲಾಯಿತು. ಮಾನ್ಯ ಪ್ರಾಚರ್ಯರು ತರಬೇತಿ ನಡೆಸುವುದು ಹೇಗೆ ? ತರಬೇತಿಗಳ ರೂಪರೇಷೆಯ ಪಾಠ ಬೋಧಿಸಿದರು. ಕಡೆಗೆ ಎಲ್ಲರನ್ನೂ ಆತ್ಮೀಯವಾಗಿ ಬೀಳ್ಕೊಡಲಾಯಿತು.
- Prashanth M C
Lecturer, Diet, Mysore

Wednesday 24 September 2014

ನಂದನದ ತುಣಕು


ವಿಶ್ವದ ಹಲವು ಹೃದಯಗಳು ಮಿಡಿಯುತಿವೆ. ಮೈಸೂರಿನತ್ತ  ಹೆಜ್ಜೆ ಇಡುತಿವೆ. ಕಾರಣ ಬಚ್ಚಿಟ್ಟ ಚಾಕಲೇಟ್ ಅಲ್ಲ. ಬಿಚ್ಚಿಟ್ಟ ಬೊಂಬಾಯಿ ಮಿಠಾಯಿ. ಸವಿದಷ್ಟೂ ರುಚಿ. ನೋಡಿದಷ್ಟೂ ಹಿತ. ಅದುವೇ ದಸರ. ಮೈಸೂರು ದಸರ. ಎಷ್ಟು ಕಣ್ ಬೇಟವೋ ಅಷ್ಟೂ ಮೈಸೂರು ಮನಸೂರೆಗೊಳ್ಳುತಿದೆ.


ಹೀಗೆ, ನನ್ನೂರಿನ ನೆಲದಲ್ಲೇ ಇದೆ ಬೇಸಿಗೆ ಅರಮನೆ. ಅದು ವಸಂತಮಹಲ್. ಇಲ್ಲಿ ನಂದನದ ತುಣಕು ಬಿದ್ದಿದೆ. ಅರ್ಥಾತ್ ಹೂ ಚೆಲುವೆಲ್ಲಾ ತಂದೆಂದಿದೆ. ಮಕರಂದದ ಅರಿಶಿಣದಿ-ಭುವನೇಶ್ವರಿ ಕುಂಕುಮದಿ...ಬಗೆಬಗೆಯ ಬಣ್ಣದಿ ಮೈದಳೆದು ಚೆಲುವಿನ ಚಿತ್ತಾರ ಬರೆದಿವೆ ಹೂರಾಶಿ

ಇಲ್ಲಿ ಚೆಂಡುಹೂ, ಬೆಟ್ಟದ ತಾವರೆ.ಜೀನಿಯಾ, ಕಾಕ್ಸ್ ಕೂಂಬ್ , ಸೆಲೋಷಿಯಾ, ಹಾಸ್ಟರ್, ಗುಂಡು ರಂಗು, ಬಿಂದಿಗೆ ಹೂವು, ಕರ್ಣಕುಂಡಲ, ಗೈ ಲಾರ್ಡಿಯಾ, ಸಾಲ್ವಿಯಾ, ರೆಡ್ ಸಾಲ್ವಿಯಾ,..ಹೀಗೆ ಹಲವು ಭಾಷೆಯ-ಹಲವು ಬಣ್ಣದ-ಹಲವು ಜಾತಿಯ ಹೂಗಳಿದ್ದು, ವೈವಿಧ್ಯತೆಯಲ್ಲಿ ಏಕತೆ ಸಾರುತಿವೆ. ಒಂದಕ್ಕೊಂದು ಪೈಪೋಟಿ ಮೆರೆಯುತಿವೆ.


ಬೆಳಕು ಸರಿದಂತೆ, ಇರುಳ ಸೆರಗಿಗೆ ದೀಪದ ಅಂಚು ವಸಂತಮಹಲಿನ ಸೊಬಗನ್ನು ಇಮ್ಮಡಿಗೊಳಿಸಿದೆ.



ಅಂದಹಾಗೆ ನಮ್ಮ ಪ್ರಾಚರ್ಯರಾದ ಬಿ.ಕೆ.ಬಸವರಾಜರವರು & ಉಪನ್ಯಾಸಕರಾದ ಹೆಚ್.ಬಿ.ನಿಂಗಯ್ಯರವರ ಮಾರ್ಗದರ್ಶನದಲ್ಲಿ ದಣಿವರಿಯದೆ ದುಡಿವ ಈಶ್ವರನ ದುಡಿಮೆ ಫಲವಿದು. ಇಷ್ಟೇ ಒಲವು ಡಯಟಿನ ಎಲ್ಲ ಉಪನ್ಯಾಸಕರದ್ದು. ಹೀಗೆ, ಪರಿಶ್ರಮ,ಆಸ್ಥೆ,ಒಲವು ಬೆರೆತು ನಂದನ ವನದಂತೆ ಮಿನುಗುತಿರುವ ಹೂಬನವ ನೋಡ ಬನ್ನಿ...ನಿಮಗಿದೋ ದಸರೆಗೆ ಸ್ವಾಗತ.

Sunday 14 September 2014

ರೆಮ್ಸ್ ಕಾರ್ಯಾಗಾರ

ಅನುಪಾಲನೆ, ಬೇಕೇಬೇಕು. ಮಾಡುವ ಕೆಲಸದಲ್ಲಿ. ನೋಡುವ ನೋಟದಲ್ಲಿ. ನಡೆಯುವ ನಡಿಗೆಯಲ್ಲಿ. ಖುಷಿ ನೀಡೋ ಕೃಷಿಯಲ್ಲಿ. ಎಲ್ಲೆಲ್ಲೂ ಇದಿದ್ದರೆ ಒಳಿತು. ಇದರಿಂದ ಬೆಳೆ. ಮುದದಿಂದ ಕಳೆ(ಹೊಳಪು). ನಮ್ಮ ಇಲಾಖೆ ಇದಕ್ಕೆ ಹೊರತಲ್ಲ. ನಮ್ಮ ಅನುಪಾಲನೆ ಹೇಗೆ ಸಾಗಿದೆ ? ನಾವು ಎಲ್ಲಿದ್ದೇವೆ ? ನಾವೇನಾಗಬೇಕಿದೆ ? ಎತ್ತ ಸಾಗಬೇಕಿದೆ ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟೆವು. ನಾವು ಸಾಗಿದ ಹಾದಿ ಡಿಎಂಜಿ ಹಳ್ಳಿ ತಲುಪಿತು. ಅದು ರೆಮ್ಸ್ ಅಧ್ಯಯನದ ಒಂದು ದಿನದ ಕಾರ್ಯಾಗಾರ.

 ಹಿಂದಿನ ರೆಮ್ಸ್ ಅಧ್ಯಯನದ ಒಳನೋಟ, ಮುಂದಿನ  ಅಧ್ಯಯನಗಳ ಕಣ್ಬೇಟ, ಇಲ್ಲಿ ಎಲ್ಲರನ್ನು ಒಗ್ಗೂಡಿಸಿತ್ತು. ಜವಹಾರ್ ನವೋದಯ ವಿದ್ಯಾರ್ಥಿನಿಯರು ಶುಶ್ರಾವ್ಯವಾಗಿ ವರಮಹಾಲಕ್ಷ್ಮಿಯನ್ನು ಪ್ರಾರ್ಥನೆಯೊಂದಿಗೆ ಕರೆದರು.

ಮೈಸೂರು ವಿಭಾಗದ ಸಹನಿರ್ದೇಶಕರಾದ ಶ್ರೀ ಚಾಮೇಗೌಡರು ಸರ್ಕಾರಿ ಶಾಲೆಗಳ ಅಂದಿನ ವೈಭವವನ್ನು ಸ್ಮರಿಸಿದರು. ಗುಣಮಟ್ಟಕ್ಕೆ ಆದ್ಯತೆ ನೀಡಲು ಹೇಳಿದರು.



 
ಮಧ್ಯಾಹ್ನ ಊಟದ ಸವಿ ಬಳಿಕ ಹೊರಗೆ ತಿಳಿಮೋಡ ಕಂಡಿತು. ಒಳಗೆ ಅರಿವುನೋಡ ಎಂದರು ಖಾದಿಯುಟ್ಟ ವ್ಯಕ್ತಿ. ಅವರೇ ವಿವೇಕಾನಂದ ಯೂತ್ ಮುಮೆಂಟ್ ನ  ಡಾ.ಬಾಲಸುಬ್ರಹ್ಮಣ್ಯರವರು. ಸಣ್ಣ ಸಣ್ಣ ವಿಚಾರಗಳಲ್ಲೂ ಶ್ರೇಷ್ಠತೆಯಿಡಿ ಎಂದರು. ಕನಸು ಕಾಣಿ. ಕನಸಿನಂತೆ ಕೆಲಸ ಮಾಡಿ ಎಂದರು. 
 
 
ರೆಮ್ಸ್ ನೋಡಲ್ ಅಧಿಕಾರಿ ಶ್ರೀಮತಿ ಮಂಜುಳ ರವರು ಪ್ರಾಸ್ತಾವಿಕ ನುಡಿಮುಂದಿಟ್ಟರೆ, ಮಾನ್ಯ ಪ್ರಾಂಶುಪಾಲರಾದ ಬಿ.ಕೆ.ಬಸವರಾಜರವರು ಅಧ್ಯಕ್ಷೀಯ ನುಡಿಯ ಜತೆ ತೆರೆ ಎಳೆದರು. ಆದರೆ ತೆರೆಗು ಮುನ್ನ ಉಪನ್ಯಾಸಕರಾದ ಪುಷ್ಪಲತಾರಿಂದ  ಕ್ಯುಎಂಟಿ, ಸ್ನೇಹಲತಾರಿಂದ ಕೆ.ಎಸ್.ಕ್ಯು.ಎ.ಎ.ಸಿ, ಶ್ರೀ ಸ್ವಾಮಿ .ಎಸ್ ರವರಿಂದ ಸಿಸಿಇಒಳನೋಟಗಳ ಅನಾವರಣವಾಯಿತು. ಶ್ರೀಮತಿ ತ್ರಿವೇಣಿಯವರ ನಿರೂಪಣೆ ಕಾರ್ಯಕ್ರಮವನ್ನು ಚೆಂದಗಾಣಿಸಿತು.

Saturday 13 September 2014

ನೆನೆ ನೆನೆ ಆ ದಿನವಾ

ಶಿಕ್ಷಕ-ರಾಷ್ಟ್ರ ರಕ್ಷಕ. ಒಂದು ದೇಶದ ಭವಿಷ್ಯ ತರಗಿ ಕೋಣೆಯೊಳಗೆ ನಿರ್ಮಾಣಗೊಳ್ಳುತ್ತೆ. ಇತ್ಯಾದಿ ಇತ್ಯಾದಿ. ಮಾತು ಕೇಳಿದ್ದೇವೆ. ಕೇಳುತ್ತಿದ್ದೇವೆ. ಕೇಳುತ್ತಿರುತ್ತೆವೆ. ಇದು ಸತ್ಯ. ಹಾಗಾಗಿಯೇ ಸತ್ಯಧ್ವನಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿರುತ್ತೆ. ಹೀಗೆಯೇ ಸತ್ಯಧ್ವನಿ ಪ್ರತಿಧ್ವನಿಸಿದ್ದು ಶಿಕ್ಷಕರ ದಿನಾಚರಣೆಯಲ್ಲಿ. ಈ ವರ್ಷದ ಶಿಕ್ಷಕರ ದಿನ ಇತಿಹಾಸ. ಕಾರಣ ನಿಮಗೆ ತಿಳಿದಿದೆ. 

ಇದು ಈ ದೇಶದ ಇತಿಹಾಸದಲ್ಲೇ ಮೊದಲು. ದೆಹಲಿಯ ಮಾಣಿಕ್ ಷಾ ಸಭಾಂಗಣ ಎಲ್ಲ ಸುದ್ದಿವಾಹಿನಿಗಳಲ್ಲಿ ವಿಜೃಂಭಿಸಿತು. ಭವ್ಯಭಾರತದ ಕನಸುಗಳು ಕಣ್ತೆರೆದವು, ಕಣ್ತೆರೆಸಿದವು. ಮಧ್ಯಾಹ್ನ 3.00 ಗಂಟೆಯಿಂದ 4.45ರವರೆಗೆ ಮನೆಮನೆಳಲ್ಲಿ ಮಕ್ಕಳ ಪ್ರಶ್ನೆ ಪ್ರತಿಫಲಿಸಿದವು.

ಶ್ರಿ ನರೇಂದ್ರ ಮೋದಿಯವರ ಮಾತುಗಳನ್ನು ಹಿಡಿದಿಡುವುದಾದರೇ…
-      ದೇಶೋದ್ಧಾರಕ್ಕೆ ದೊಡ್ಡ ದೊಡ್ಡ ಕನಸುಬೇಕಿಲ್ಲ. ಪುಟ್ಟ ಪುಟ್ಟ ಆಲೋಚನೆ ಸಾಕಾರಗೊಳಿಸಿ
-      ಸಣ್ಣ ಕೆಲಸಗಳೊಂದಿಗೆ ಕೈ ಜೋಡಿಸಿದರೇ ಅದು ಶ್ರೇಷ್ಠ ದೇಶಸೇವೆ.
-      ಮೇರು ವ್ಯಕ್ತಿಗಳ ಜೀವನಚರಿತ್ರಯಿಂದ ಸತ್ಯದರ್ಶನ, ಬದುಕಿನ ಮೌಲ್ಯದ ಅರಿವು ಸಾಧ್ಯ.
-      ಅಂಗೈಯಲ್ಲೇ ವಿಶ್ವ ತೆರೆದಿಡುವ ಗೂಗಲ್ ಬರಿ ಮಾಹಿತಿ ನೀಡುವುದೇ ವಿನಃ ಜ್ಞಾನವನ್ನಲ್ಲ.
-      ಅದೇನೇ ಅಡ್ಡಿ ಆತಂಕ ಬರಲಿ ಕನಸುಗಳ ಬೆನ್ನೇರುವುದ ಬಿಡದಿರಿ.
-      ಸೌಹಾರ್ದತೆ ಕಲಿಯಿರಿ. ಶಾಂತಿಯಲ್ಲಿ ನೆಲೆಸಿರಿ.
-      ಚೆನ್ನಾಗಿ ಕೆಲಸ ಮಾಡಿ. ಚೆನ್ನಾಗಿ ಆಟವಾಡಿ. ಸಾಕಷ್ಟು ಬೆವರು ಹರಿಸಿ.
-      ಎಲ್ಲ ಮಕ್ಕಳೂ ವಿಶೇಷ. ಶಿಕ್ಷಕರು ಇಲ್ಲಿ ತಾರತಮ್ಯ ಕಾಣಬಾರದು.

ದೇಶಕ್ಕೆ ದೇಶವೇ ಅಂದು ಕುತೂಹಲದ ಕಣ್ತೆರೆದಿತ್ತು. ಅದಕ್ಕೆ ನಮ್ಮ ಜಿಲ್ಲೆಯೂ ಹೊರತಲ್ಲ. ಅಂದು ಮಕ್ಕಳು ಸಂವಾದದ ನೇರ ಪ್ರಸಾರ ವೀಕ್ಷಿಸಿದರು. ಸುತ್ತೂರಿನಲ್ಲಿ ಸದ್ದಿಲ್ಲದೇ ಸಂವಾದಕ್ಕೆ ಮಕ್ಕಳು ಕಿವಿಯಾದರು. ಆ ದೃಶ್ಯವೇ ಅಮೋಘ.




- Prashanth M C
Lecturer, Diet, Mysore

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...